ಕವಿತಾಳ, ಜು.14: ಜನರಿಗೆ ಉತ್ತಮ ಆರೋಗ್ಯ ಸೇವೆ ಒದಗಿಸಲು ರಾಯಚೂರಿನಲ್ಲಿ ಏಮ್ಸ್ ಸ್ಥಾಪನೆ ಹಾಗೂ ಸಮಗ್ರ ನೀರಾವರಿ ಯೋಜನೆ ಜಾರಿಗಾಗಿ ನವಲಿ ಮತ್ತು ತಿಂಥಿಣಿ ಸೇತುವೆ ಬಳಿ ಜಲಾಶಯ ನಿರ್ಮಾಣದ ವಿಷಯವನ್ನು ಸಂಬಂಧಿಸಿದವರ ಗಮನಕ್ಕೆ ತಂದು, ಶೀಘ್ರದಲ್ಲೇ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸುವ ಪ್ರಯತ್ನ ಮಾಡಲಾಗುವುದು ಎಂದು ಗೌರಿಗದ್ದೆಯ ಅವಧೂತ ವಿನಯ ಗುರೂಜಿ ಹೇಳಿದರು.ಕೆಎಸ್ಎನ್ ಜನಕಲ್ಯಾಣ ಸಮಿತಿ ವತಿಯಿಂದ ಮಾಜಿ ಸಚಿವ ಕೆ. ಶಿವನಗೌಡ ನಾಯಕ ಅವರ 49ನೇ ಜನ್ಮದಿನದ ಅಂಗವಾಗಿ ಆಯೋಜಿಸಿದ್ದ ಸಮಗ್ರ ನೀರಾವರಿ, ನವಲಿ ಜಲಾಶಯ ನಿರ್ಮಾಣ, ತಿಂಥಿಣಿ ಸೇತುವೆ ಬಳಿ ಜಲಾಶಯ ನಿರ್ಮಾಣ ಹಾಗೂ ಏಮ್ಸ್ ಮಂಜೂರಾತಿ ಸಂಕಲ್ಪ ಸಮಾಗಮ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.ರಾಜಕಾರಣಿಗಳ ಜನ್ಮದಿನಗಳು ಸಾಮಾನ್ಯವಾಗಿ ವೈಯಕ್ತಿಕ ವೈಭವದ ಆಚರಣೆಯಾಗಿರುತ್ತವೆ. ಆದರೆ ಶಿವನಗೌಡ ನಾಯಕ ಅವರು ರೈತರ ಬದುಕು ಹಸನಾಗಿಸಲು ಸಮಗ್ರ ನೀರಾವರಿ ಹಾಗೂ ಈ ಭಾಗದ ಜನರಿಗೆ ಉನ್ನತ ಮಟ್ಟದ ಆರೋಗ್ಯ ಸೇವೆ ದೊರಕುವಂತೆ ಏಮ್ಸ್ ಸ್ಥಾಪನೆಯ ಸಂಕಲ್ಪದೊಂದಿಗೆ ತಮ್ಮ ಜನ್ಮದಿನವನ್ನು ಆಚರಿಸುತ್ತಿರುವುದು ವಿಶಿಷ್ಟವಾಗಿದೆ. ಇದು ಕೇವಲ ಜನ್ಮದಿನದ ಕಾರ್ಯಕ್ರಮವಲ್ಲ, ಕುಂಭಮೇಳದಂತಿರುವ ಜನಸಾಗರದ ಸಮಾಗಮವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.ರೈತರ ಹಸಿವು ನೀಗಿಸುವ ಸಮಗ್ರ ನೀರಾವರಿ ಯೋಜನೆಯ ಭಾಗವಾಗಿ ನವಲಿ ಹಾಗೂ ತಿಂಥಿಣಿ ಸೇತುವೆ ಬಳಿ ಜಲಾಶಯ ನಿರ್ಮಾಣ ಕಾಮಗಾರಿಗೆ ಮುಂದಿನ ಮೂರು ವರ್ಷಗಳೊಳಗೆ ಗುದ್ದಲಿ ಪೂಜೆ ನೆರವೇರಿಸುವಂತಾಗಲಿ ಎಂದು ಆಶಿಸಿದರು.ಶಿವನಗೌಡ ನಾಯಕ ಅವರು ಸ್ನೇಹಕ್ಕೂ ಬದ್ಧರು, ಅಗತ್ಯವಿದ್ದರೆ ಹೋರಾಟಕ್ಕೂ ಸಿದ್ಧರಾಗಿರುವ ನಾಯಕರು. ಅಭಿವೃದ್ಧಿಯ ಕನಸು ಹೊಂದಿರುವ ಅವರಿಗೆ ಶೀಘ್ರದಲ್ಲೇ ಅಧಿಕಾರ ದೊರೆಯಲಿ ಎಂದು ಆಶೀರ್ವದಿಸಿದರು.ರಾಯಚೂರು ಜಿಲ್ಲೆ ಪುಣ್ಯಭೂಮಿಯಾಗಿದ್ದು, ಚಿನ್ನ ಮತ್ತು ಬೆಳಕಿನ ನಾಡಾಗಿರುವುದರ ಜೊತೆಗೆ ರಾಘವೇಂದ್ರ ಸ್ವಾಮಿಗಳ ಪವಿತ್ರ ನೆಲೆ ಹಾಗೂ ಗುರುಗುಂಟಿಯ ಅಮರೇಶ್ವರರ ತಾಣದಿಂದ ಕೇದಾರ ಕ್ಷೇತ್ರದಂತೆಯೇ ಪಾವನವಾಗಿದೆ ಎಂದು ಬಣ್ಣಿಸಿದರು. ಉತ್ತರ ಕರ್ನಾಟಕದ ಜನರು ಪ್ರಸಾದ ಮತ್ತು ದಾಸೋಹ ಪರಂಪರೆಗೆ ಹೆಸರುವಾಸಿಗಳಾಗಿದ್ದಾರೆ ಎಂದರು.ಇದಕ್ಕೂ ಮುನ್ನ ವಿನಯ ಗುರೂಜಿಯವರನ್ನು ಸಿಂಗರಿಸಿದ ಎತ್ತಿನ ಬಂಡಿಯಲ್ಲಿ ಕೂರಿಸಿ, ನೂರಾರು ಮಹಿಳೆಯರು ಕುಂಭ ಹೊತ್ತು ಕವಿತಾಳ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಭವ್ಯ ಮೆರವಣಿಗೆ ನಡೆಸಿ ಕಾರ್ಯಕ್ರಮದ ವೇದಿಕೆಗೆ ಕರೆತಂದರು.





Recent Comments