ರಾಯಚೂರು: ನಗರದ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಂಘಟನೆಯಾದ ಶೃತಿ ಸಾಹಿತ್ಯ ಮೇಳದಿಂದ ಮೇ 29ರಂದು ಬೆಳಗ್ಗೆ 10 ಗಂಟೆಗೆ ನಗರದ ಎಸ್.ಆರ್.ಕೆ. ಬಿ.ಎಡ್ ಕಾಲೇಜಿನ ಟ್ಯಾಗೋರ್ ಸಭಾಂಗಣದಲ್ಲಿ ‘ಶೃತಿ-ಸಂಸ್ಕೃತಿ’ ಉಪನ್ಯಾಸ ಹಾಗೂ ಸಂಗೀತ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಶೃತಿ ಸಾಹಿತ್ಯ ಮೇಳದ ಅಧ್ಯಕ್ಷ ಮುರಳಿಧರ ಕುಲಕರ್ಣಿ ತಿಳಿಸಿದರು.
ನಗರದ ಪತ್ರಿಕಾ ಭವನದಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾರ್ಯಕ್ರಮದಲ್ಲಿ ವಿಜಯ ಸಿಂಹಚಾರ್ಯ ತೋಟಂತಿಲ್ಲಾಯ ಅವರು “ಸಂಸ್ಕೃತಿ ಮತ್ತು ಸಂಸ್ಕಾರ” ವಿಷಯದ ಕುರಿತು ಉಪನ್ಯಾಸ ನೀಡಲಿದ್ದಾರೆ ಎಂದು ಹೇಳಿದರು.
ಇದೇ ವೇಳೆ ಸ್ಥಳೀಯ ಕಲಾವಿದರಾದ ಗುಂಡಾಚಾರ್ಯ ಹೊಳಗುಂದಿ, ವಾಸುಕಿ ಕರಣಂ ಹಾಗೂ ಪೂಜಾ ಕೆ. ಅವರಿಂದ ಭಕ್ತಿಗೀತೆ, ಭಾವಗೀತೆ ಮತ್ತು ಜನಪದ ಗೀತೆಗಳ ಸಂಗೀತ ಕಾರ್ಯಕ್ರಮ ನಡೆಯಲಿದೆ. ಸಂಗೀತ ಕಾರ್ಯಕ್ರಮಕ್ಕೆ ಶ್ರೀಪಾದ್ ಲಕ್ಕಮ್ ದಿನ್ನಿ ತಬಲಾ ಸಾಥ್ ಹಾಗೂ ಕೊಪ್ರೇಶ್ ದೇಸಾಯಿ ಹಾರ್ಮೋನಿಯಂ ಸಾಥ್ ನೀಡಲಿದ್ದಾರೆ ಎಂದು ತಿಳಿಸಿದರು.
ಕಾರ್ಯಕ್ರಮವನ್ನು ನರಸಿಂಹಲು ವಡವಾಟಿ ಉದ್ಘಾಟಿಸಲಿದ್ದು, ಅಧ್ಯಕ್ಷತೆಯನ್ನು ಆರ್.ಕೆ. ಅಮರೇಶ್ ವಹಿಸಲಿದ್ದಾರೆ ಎಂದು ಹೇಳಿದರು.
ದರೂರ್ ಬಸವರಾಜ ಪಾಟೀಲ್, ಡಾ. ಬಿ. ವಿಜಯರಾಜೇಂದ್ರ, ಡಾ. ಶರಣಪ್ಪ ಗೋನಾಳ ಹಾಗೂ ಡಾ. ವಿರುಪಾಕ್ಷಿ ಬಿ.ಎಂ. ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಕಾರ್ಯಕ್ರಮಕ್ಕೆ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಮುರಳಿಧರ ಕುಲಕರ್ಣಿ ಮನವಿ ಮಾಡಿದರು. ಸುದ್ದಿಗೋಷ್ಠಿಯಲ್ಲಿ ರಮೇಶ ಕುಲಕರ್ಣಿ ಉಪಸ್ಥಿತರಿದ್ದರು.




Recent Comments