ರಾಯಚೂರು, ಜುಲೈ 24,-ರಾಯಚೂರಿನ ನಗರದ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ (ಆರ್ ಎಪಿಎಂಸಿ) ಇರುವ ದಿ ರಾಯಚೂರು ಒಕ್ಕಲುತನ ಹುಟ್ಟುವಳಿ ಮಾರಾಟ ಹಾಗೂ ಸಂಸ್ಕರಣ ಸಹಕಾರಿ ಸಂಘ ನಿಯಮಿತದಲ್ಲಿ ರೈತರಿಗೆ ರಸಗೊಬ್ಬರ ವಿತರಿಸುವ ವೇಳೆ ನಿಗದಿತ ದರಕ್ಕಿಂತ ಹೆಚ್ಚಿನ ಹಣ ವಸೂಲಿ ಮಾಡಲಾಗುತ್ತಿದೆ ಎಂಬ ದೂರುಗಳ ಹಿನ್ನೆಲೆಯಲ್ಲಿ ಕರ್ನಾಟಕ ರಾಷ್ಟ್ರ ಸಮಿತಿ (ಕೆಆರ್ಎಸ್) ಪಕ್ಷದ ವತಿಯಿಂದ ಸೊಸೈಟಿಗೆ ಭೇಟಿ ನೀಡಿ ಪರಿಶೀಲನೆ ಹೆಚ್ಚಿನ ಬೆಲೆ ಗೆ ಮಾರಾಟ ಮಾಡುತ್ತಿರುವದಕ್ಕೆ ವಿರೋಧ ವ್ಯಕ್ತಪಡಿಸಿತು. ರೈತರಿಗೆ 267 ರೂ ಬೆಲೆಯ ರಸಗೊಬ್ಬರವನ್ನು 300 ರೂ ಕ್ಕೆ ಮಾರಾಟ ಮಾಡಿ ಹೆಚ್ಚುವರಿ ಹಣ ವಸೂಲಿ ಮಾಡುತ್ತಿರುವುದು ಬೆಳಕಿಗೆ ಬಂದಿತು. ಈ ಬಗ್ಗೆ ಕೆಆರ್ಎಸ್ ಪಕ್ಷದ ಮುಖಂಡರು ಸೊಸೈಟಿ ಅಧಿಕಾರಿಗಳನ್ನು ಪ್ರಶ್ನಿಸಿ, ರೈತರ ಮೇಲೆ ಇಂತಹ ಅನ್ಯಾಯವನ್ನು ಯಾವುದೇ ಕಾರಣಕ್ಕೂ ಸಹಿಸಲಾಗುವುದಿಲ್ಲ ಎಂದು ಎಚ್ಚರಿಕೆ ನೀಡಿದರು.ಈ ಅಕ್ರಮದ ಕುರಿತು ಕೆಆರ್ಎಸ್ ಪಕ್ಷ ಕೃಷಿ ಇಲಾಖೆಗೆ ದೂರು ಸಲ್ಲಿಸಿದ ಹಿನ್ನೆಲೆಯಲ್ಲಿ, ರಾಯಚೂರು ತಾಲೂಕು ಕೃಷಿ ಉಪ ನಿರ್ದೇಶಕಿ ದೀಪಾ ಅವರು ತಕ್ಷಣವೇ ಸೊಸೈಟಿಗೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು. ರೈತರಿಂದ ದೂರುಗಳನ್ನು ಆಲಿಸಿ, ದಾಖಲೆಗಳನ್ನು ಪರಿಶೀಲಿಸಿದ ಅವರು ಪ್ರಕರಣದ ಕುರಿತು ಸಮಗ್ರ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ನಿಯಮಾನುಸಾರ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.ಈ ಸಂದರ್ಭದಲ್ಲಿ ಮಾತನಾಡಿದ ಕೆಆರ್ಎಸ್ ಪಕ್ಷದ ಮುಖಂಡ ನಿರುಪಾದಿ ಕೆ ಗೋಮರ್ಸಿ ಮಾತನಾಡಿ, ರೈತರಿಗೆ ಸರ್ಕಾರ ನಿಗದಿಪಡಿಸಿರುವ ದರದಲ್ಲಿಯೇ ರಸಗೊಬ್ಬರ ವಿತರಿಸಬೇಕು. ಯಾವುದೇ ಕಾರಣಕ್ಕೂ ಹೆಚ್ಚುವರಿ ಹಣ ವಸೂಲಿ ಮಾಡುವುದು ಕಾನೂನುಬಾಹಿರವಾಗಿದ್ದು, ರೈತರ ಶೋಷಣೆಗೆ ಕಾರಣವಾಗುತ್ತದೆ. ಇಂತಹ ಅಕ್ರಮಗಳು ಜಿಲ್ಲೆಯಲ್ಲಿ ಎಲ್ಲಿಯೇ ನಡೆದರೂ ಕೆಆರ್ಎಸ್ ಪಕ್ಷ ಮೌನವಾಗಿರುವುದಿಲ್ಲ ಎಂದು ಸ್ಪಷ್ಟಪಡಿಸಿದರು.ರೈತರು ಯಾವುದೇ ಸೊಸೈಟಿ ಅಥವಾ ಮಾರಾಟ ಕೇಂದ್ರದಲ್ಲಿ ನಿಗದಿತ ದರಕ್ಕಿಂತ ಹೆಚ್ಚಿನ ಹಣ ವಸೂಲಿ ಮಾಡಿದರೆ ಕೂಡಲೇ ಸಂಬಂಧಪಟ್ಟ ಅಧಿಕಾರಿಗಳಿಗೆ ಹಾಗೂ ಕೆಆರ್ಎಸ್ ಪಕ್ಷಕ್ಕೆ ಮಾಹಿತಿ ನೀಡುವಂತೆ ಮನವಿ ಮಾಡಿದರು.ರೈತರ ಹಿತಾಸಕ್ತಿಯ ರಕ್ಷಣೆ, ರಸಗೊಬ್ಬರ ವಿತರಣೆಯಲ್ಲಿ ಪಾರದರ್ಶಕತೆ ಮತ್ತು ಅಕ್ರಮಗಳ ವಿರುದ್ಧ ನಿರಂತರ ಹೋರಾಟ ನಡೆಸುವುದು ಕೆಆರ್ಎಸ್ ಪಕ್ಷದ ಬದ್ಧತೆಯಾಗಿದೆ ಎಂದು ಪಕ್ಷದ ಮುಖಂಡರು ತಿಳಿಸಿದ್ದಾರೆ.ಇದೇ ಸಂದರ್ಭದಲ್ಲಿ ಪಕ್ಷದ ರಾಜ್ಯ ಕಾರ್ಯನಿರ್ವಾಹಕ ಸಮಿತಿ ಸದಸ್ಯರಾದ ಕಂದೂರು ರಾಘವೇಂದ್ರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಂಕರ್ ಗೌಡ ಗಾರಲದಿನ್ನಿ,ಜಿಲ್ಲಾ ಕಾರ್ಯದರ್ಶಿ ಸಾಬಣ್ಣ,ಸೈನಿಕರಾದ ನಿರುಪಾದಿ ಕೆ ಗೋಮರ್ಸಿ, ಸುಧೀರ್,ವಸಂತ ಕುಮಾರ್ ಸೇರಿದಂತೆ ಅನೇಕರು ಭಾಗವಹಿಸಿದ್ದರು.





Recent Comments