ರಾಯಚೂರು,ಆ.೩-ಲಿಂಗಸುಗೂರು ಶಾಸಕ ಮಾನಪ್ಪ ವಜ್ಜಲ್ ಅವರ ಸಹೋದರ ಕರಿಯಪ್ಪ ವಜ್ಜಲ್ ಹಾಗೂ ಬಿಜೆಪಿ ಜಿಲ್ಲಾಧ್ಯಕ್ಷ ವೀರನಗೌಡ ಲೆಕ್ಕಿಹಾಳ ನಡುವೆ ಹಣದ ವಿಚಾರವಾಗಿ ವಾಗ್ವಾದನಡೆದು ಬೆಂಬಲಿಗರ ಮಧ್ಯೆ ಪರಸ್ಪರ ಕೈಕೈ ಮಿಲಾಯಿಸಿದ್ದು, ಸ್ಥಳದಲ್ಲಿ ಕೆಲಕಾಲ ಉದ್ವಿಗ್ನ ವಾತಾವರಣ ನಿರ್ಮಾಣವಾದ ಘಟನೆ ಜರುಗಿದೆ.ಹಣದ ವಿಷಯದಲ್ಲಿ ಇಬ್ಬರ ಮದ್ಯ ಮಾತಿನ ಚಕಮಕಿ ನಡೆದಿದೆ. ಏಕವಚನದಲ್ಲಿ ಬೈದಾಡಿಕೊಂಡ ಇಬ್ಬರು ನಾಯಕರು ಕೈ ಕೈ ಮಿಲಾಯಿಸುತ್ತಲೆ ಬೆಂಬಲಿಗರ ಮದ್ಯೆ ನೂಕಾಟ ತಳ್ಳಾಟ ನಡೆದಿದೆ.ನಿಮ್ಮ ಹೆಂಡತಿಯನ್ನು ಜಿ.ಪಂ ಸದಸ್ಯ ಮಾಡಲು ಹಗಲು-ರಾತ್ರಿ ಓಡಾಡಿದ್ದಾರೆ ಎಂದು ಜಿಲ್ಲಾಧ್ಯಕ್ಷ ವೀರನಗೌಡ ಆರೋಪಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಕರಿಯಪ್ಪ ವಜ್ಜಲ್, ಯಾರೂ ಸುಮ್ಮನೆ ಮಾಡಿಲ್ಲ, ಅವರಿಗೆ ಹಣ ನೀಡಿದ್ದೇನೆ ಎಂದು ಹೇಳಿದ್ದಾರೆ. ಘಟನೆ ಲಿಂಗಸುಗೂರು ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಘಟನೆ ಯಿಂದ ಬಿಗು ವಾತವರಣ ನಿರ್ಮಾಣವಾಗಿದೆ. ಮಾನಪ್ಪ ವಜ್ಜಲ ಬೆಂಬಲಿಗರೆಂದು ಗುರುತಿಸಿಕೊಂಡಿದ್ದ ವೀರನಗೌಡ ಲೆಕ್ಕಿಹಾಳ ವಿರುಧ್ದ ಕರಿಯಪ್ಪ ವಜ್ಜಲ ಘರ್ಷಣೆಗೆ ಇಳಿದಿದ್ದು ಚರ್ಚೆಗೆ ಗ್ರಾಸವಾಗಿದೆ.





Recent Comments